ಕುಮಟಾ ಹವ್ಯಕ ಸಭಾಭವನದಲ್ಲಿ ಇಂದಿನಿಂದ ಯಕ್ಷೋತ್ಸವ ಕಾರ್ಯಕ್ರಮ
ಲೇಖಕರು : ವಿಜಯ ಕರ್ನಾಟಕ
ಶನಿವಾರ, ಫೆಬ್ರವರಿ 13 , 2016
|
ಫೆಬ್ರವರಿ 13, 2016
|
ಕುಮಟಾ ಹವ್ಯಕ ಸಭಾಭವನದಲ್ಲಿ ಇಂದಿನಿಂದ ಯಕ್ಷೋತ್ಸವ ಕಾರ್ಯಕ್ರಮ
ಕುಮಟಾ :
ಯಕ್ಷಗಾನ ಸಂಶೋಧನಾ ಕೇಂದ್ರ ಕುಮಟಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ.13 ಹಾಗೂ 14ರಂದು ಪಟ್ಟಣದ ಹವ್ಯಕ ಸಭಾಭವನದಲ್ಲಿ ಯಕ್ಷೋತ್ಸವ ಕಾರ್ಯಕ್ರಮ ನಡೆಯಲಿದೆ. ಯಕ್ಷೋತ್ಸವದಲ್ಲಿ ಹೊಸ ಚಿಗುರು ಹಳೆಬೇರು (ರಾಗ-ರಸ-ಶೋಧ), ಸಂಶೋಧಕರಿಗೆ ಸನ್ಮಾನ, ಮೋಹಮೇನಕೆ ಯಕ್ಷಗಾನ, ಯಕ್ಷ-ಗಾನ-ನತ್ಯ-ಚಿತ್ರ, ಗೀರಾಮಾಯಾಣ, ಗಾನಸೌರಭ ಹಾಗೂ ಯಕ್ಷಗಾನ ವರ್ಣಚಿತ್ರ ಪ್ರದರ್ಶನ ನಡೆಯಲಿದೆ. ಫೆ.13ರಂದು 3 ಗಂಟೆಗೆ ಡಾ.ರೇವತಿ ರಾವ್ ಕಾರ್ಯಕ್ರಮ ಉದ್ಘಾಟಿಸುವರು. ನಂತರ ಹೊಸ ಚಿಗುರು ಹಳೆಬೇರು ಕಾರ್ಯಕ್ರಮದಲ್ಲಿ ಪರಂಪರೆಯ ಹಾಡುಗಳನ್ನು ಕಮಲಾ ಹೆಗಡೆ ಗುಣವಂತೆ (ಹಾಡಿನ ಕಮಲಕ್ಕ), ಪವಿತ್ರಾ ಕೆ. ಭಟ್ ಯಾಣ ಹಾಗೂ ರಾಧಾ ಹೆಗಡೆ ರಾಗಿಹೊಸಳ್ಳಿ ಹಾಡಲಿದ್ದಾರೆ.
ಅದೇ ಮಟ್ಟು ಹಾಗೂ ರಾಗದಲ್ಲಿ ಸರ್ವೇಶ್ವರ ಹೆಗಡೆ ಮುರೂರು ಯಕ್ಷಗಾನ ಪದ್ಯಗಳನ್ನು ಹಾಡುವರು. ಮದ್ದಳೆಯಲ್ಲಿ ಅನಂತಪದ್ಮನಾಭ ಪಾಠಕ ಸಹಕರಿಸುವರು. 'ಸಂಶೋಧಕರಿಗೆ ಸನ್ಮಾನ' ಕಾರ್ಯಕ್ರಮದಲ್ಲಿ ಕಬ್ಬಿನಾಲೆ ವಸಂತ ಭಾರಧ್ವಾಜ ಅವರನ್ನು ಸನ್ಮಾನಿಸಲಾಗುವುದು. ಉಮೇಶ ಶಾಸ್ತ್ರಿ ಭಾಗವಹಿಸಲಿದ್ದಾರೆ. ಸಂಜೆ 6.30ರಿಂದ 8.30 ರವರೆಗೆ ಮಂಟಪ ಪ್ರಭಾಕರ ಉಪಾಧ್ಯ ಹಾಗೂ ತಂಡದವರಿಂದ 'ಮೋಹಮೇನಕೆ' ಯಕ್ಷಗಾನ ನಡೆಯುವುದು. ಫೆ.ರಂದು ಬೆಳಗ್ಗೆ 10ರಿಂದ ಯಕ್ಷ-ಗಾನ-ನತ್ಯ-ಚಿತ್ರ ಎಂಬ ಅಪರೂಪದ ಕಾರ್ಯಕ್ರಮ ನಡೆಯುವುದು.
ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರೊಂದಿಗೆ ಮದ್ದಳೆ, ಚಂಡೆಯಲ್ಲಿ ಸುನೀಲ ಭಂಡಾರಿ ಹಾಗೂ ರಾಕೇಶ ಮಲ್ಯ ಸಹಕರಿಸುವರು. ನೃತ್ಯಾಭಿನಯದಲ್ಲಿ ಉದಯ ಕಡ್ಬಾಳ ಹಾಗೂ ಸುಬ್ರಹ್ಮಣ್ಯ ಯಲಗುಪ್ಪ ಭಾಗವಹಿಸುವರು. ಸನ್ನಿವೇಶದ ಚಿತ್ರಣವನ್ನು ನೀರ್ನಳ್ಳಿ ಗಣಪತಿ ಅವರು ಚಿತ್ರಕಲೆಯಲ್ಲಿ ಪ್ರದರ್ಶಿಸುವರು. ಜತೆಯಲ್ಲಿ ಜಿ.ಡಿ. ಭಟ್ಟ ಕೆಕ್ಕಾರು ಹಾಗೂ ಇತರ ಕಲಾವಿದರಿಂದ ಯಕ್ಷಗಾನ ವರ್ಣಚಿತ್ರ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 2ರಿಂದ 3.30ರವರೆಗೆ ಶ್ರೀಪಾದ ಭಟ್ ಹಾಗೂ ಸಂಗಡಿಗರಿಂದ ಗೀತ ರಾಮಾಯಣ ಕಾರ್ಯಕ್ರಮ ನಡೆಯುವುದು.
ಸಂಜೆ 4.10ರಿಂದ ಗಾನ ಸೌರಭ ಕಾರ್ಯಕ್ರಮವನ್ನು ಕುಮಟಾದ ಸದಭಿರುಚಿಯ ಸಾಂಸ್ಕೃತಿಕ ಸಂಗಮ 'ಸೌರಭ' ಹಾಗೂ ಬೆಂಗಳೂರಿನ ಸಪ್ತಕ ಸಂಸ್ಥೆಗಳು ಜಂಟಿಯಾಗಿ ಸಂಘಟಿಸಿವೆ. ಇದರಲ್ಲಿ ಹಿಂದೂಸ್ತಾನಿ ಗಾಯಕ ಪಂ. ಸಂಜೀವ ಅಭ್ಯಂಕರ ಪುಣೆ ಇವರಿಂದ ಗಾಯನ ಹಾಗೂ ಅಭಂಗವಾಣಿ ನಡೆಯಲಿದೆ. ಪಂ.ರವೀಂದ್ರ ಯಾವಗಲ್ ತಬಲಾ ಸಾಥ್ ನೀಡುವರು ಹಾಗೂ ಸಂವಾದಿನಿಯಲ್ಲಿ ಪಂ.ವ್ಯಾಸಮೂರ್ತಿ ಕಟ್ಟಿ ಸಹಕರಿಸುವರು.
ಕೃಪೆ :
vijaykarnataka
|
|
|